ಇಸ್ಲಾಮಾಬಾದ್:
ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆಯ ಕ್ರೂರ ಕಾರ್ಯಾಚರಣೆ ಮತ್ತೊಮ್ಮೆ ಭಾರೀ ವಿವಾದಕ್ಕೆ ಕಾರಣವಾಗಿದೆ. ತನ್ನ ಸೇನಾ ನೆಲೆಗಳ ಮೇಲೆ ಬಲೂಚಿಸ್ತಾನ ಲಿಬರೇಶನ್ ಆರ್ಮಿ (ಬಿಎಲ್ಎ) ನಡೆಸಿದ ದಾಳಿಗೆ ಪ್ರತೀಕಾರವೆಂದು ಹೇಳಿಕೊಂಡು, ಪಾಕಿಸ್ತಾನವು ಕೇವಲ ಎರಡು ದಿನಗಳಲ್ಲಿ 145ಕ್ಕೂ ಹೆಚ್ಚು ಬಲೂಚಿಗಳನ್ನು ಹತ್ಯೆ ಮಾಡಿದೆ. ಈ ಕುರಿತು ಖುದ್ದು ಮಾಹಿತಿ ನೀಡಿರುವುದು ಪಾಕ್ ಸೇನೆಯೇ ಆಗಿದೆ.
ಬಲೂಚಿಸ್ತಾನದಲ್ಲಿ ಆರಂಭವಾಗಿರುವ ‘ಆಪರೇಷನ್ ಹಿರೋಫ್ 2.0’ ಬಳಿಕ, ಪಾಕಿಸ್ತಾನ ಸೇನೆ ಪ್ರಾಂತ್ಯದ ಹಲವೆಡೆ ನುಗ್ಗಿ ಭಾರೀ ಗುಂಡಿನ ದಾಳಿ ಹಾಗೂ ಬಾಂಬ್ ದಾಳಿಗಳನ್ನು ನಡೆಸಿದೆ. ಮಹಿಳೆಯರು ಮತ್ತು ಸಾಮಾನ್ಯ ನಾಗರಿಕರೂ ಈ ಹಿಂಸಾಚಾರದ ಬಲಿಯಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಆದರೆ ಪಾಕಿಸ್ತಾನ ಸರ್ಕಾರ, ಸತ್ತವರೆಲ್ಲರೂ ಭಯೋತ್ಪಾದಕರೇ ಎಂದು ಹೇಳಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ.
ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಮಾಹಿತಿ ನೀಡಿದ್ದು, “ಸುಮಾರು 40 ಗಂಟೆಗಳ ಕಾಲ ನಡೆದ ಸೇನಾ ಕಾರ್ಯಾಚರಣೆಯಲ್ಲಿ 145 ಜನರು ಸಾವನ್ನಪ್ಪಿದ್ದಾರೆ” ಎಂದು ಹೇಳಿದ್ದಾರೆ. ಪ್ರಾಂತ್ಯದ ನೈಋತ್ಯ ಭಾಗಗಳಲ್ಲಿ ಹಿಂಸಾಚಾರ ತೀವ್ರಗೊಂಡಿದ್ದು, ಕ್ವೆಟ್ಟಾದಲ್ಲಿನ ಪೊಲೀಸ್ ಠಾಣೆ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳು ನಾಶವಾಗಿವೆ.
ಪಾಕಿಸ್ತಾನದ ಕಿರಿಯ ಆಂತರಿಕ ಸಚಿವ ತಲಾಲ್ ಚೌಧರಿ, “ಸಾಮಾನ್ಯ ನಾಗರಿಕರ ವೇಷದಲ್ಲಿದ್ದ ದಾಳಿಕೋರರು ಆಸ್ಪತ್ರೆಗಳು, ಶಾಲೆಗಳು, ಮಾರುಕಟ್ಟೆಗಳಿಗೆ ನುಗ್ಗಿ ದಾಳಿ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ. ಆದರೆ ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರ ಇನ್ನೂ ಸ್ಪಷ್ಟ ಉತ್ತರ ನೀಡಿಲ್ಲ.
ಇದೇ ವೇಳೆ, ಪಾಕಿಸ್ತಾನವು ಎಂದಿನಂತೆ ಈ ಘಟನೆಗೆ ಭಾರತದ ಕೈವಾಡವಿದೆ ಎಂದು ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, “ಪಾಕಿಸ್ತಾನ ತನ್ನ ಆಂತರಿಕ ಸಮಸ್ಯೆಗಳಿಂದ ಜಗತ್ತಿನ ಗಮನ ಬೇರೆಡೆಗೆ ತಿರುಗಿಸಲು ಇಂತಹ ಆರೋಪಗಳನ್ನು ಮಾಡುತ್ತಿದೆ” ಎಂದು ತಿರುಗೇಟು ನೀಡಿದೆ.
ಬಲೂಚಿಸ್ತಾನ ಲಿಬರೇಶನ್ ಆರ್ಮಿ ತನ್ನ ಕಾರ್ಯಾಚರಣೆಗೆ ‘ಕಪ್ಪು ಚಂಡಮಾರುತ’ ಎಂದು ಹೆಸರಿಟ್ಟಿದ್ದು, ಪಾಕಿಸ್ತಾನದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಸಂಘಟಿತ ದಾಳಿಗಳನ್ನು ಮುಂದುವರಿಸುತ್ತಿದೆ. ಈ ನಡುವೆ ಬಲೂಚಿಸ್ತಾನದಲ್ಲಿ ಚೀನಾ ಸೇನೆ ನಿಯೋಜನೆ ಕುರಿತು ಆತಂಕ ವ್ಯಕ್ತಪಡಿಸಿದ್ದ ಮೀರ್ ಯಾರ್ ಬಲೂಚ್ ಅವರ ಎಚ್ಚರಿಕೆಯೂ ಮತ್ತೊಮ್ಮೆ ಚರ್ಚೆಗೆ ಬಂದಿದೆ.

